ಸಚಿವ ಜಾರಕಿಹೊಳಿ ನಿವಾಸದಲ್ಲಿ ED ಶೋಧ: ವಿದೇಶಿ ಹೂಡಿಕೆ, ಎರಡು ಟ್ರಂಕ್‌ ಹಣದ ಆರೋಪಕ್ಕೆ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ

ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಹಾಗೂ ಆಪ್ತರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸಿದ ಶೋಧದ ಬೆನ್ನಲ್ಲೇ ಹರಿದಾಡುತ್ತಿರುವ ₹750 ಕೋಟಿ ವಿದೇಶಿ ಹೂಡಿಕೆ, ಎರಡು ಟ್ರಂಕ್‌ ಹಣ ಹಾಗೂ ‘ಮೈಸೂರು ಲಿಂಕ್‌’ ಕುರಿತ ಚರ್ಚೆಗಳಿಗೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಧೈರ್ಯ ತುಂಬಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ₹1.73 ಕೋಟಿ ಮಾತ್ರ ವಶಪಡಿಸಿಕೊಳ್ಳಲಾಗಿದೆ. ₹750 ಕೋಟಿ ವಿದೇಶಿ ಹೂಡಿಕೆ ಅಥವಾ ಎರಡು ಟ್ರಂಕ್‌ಗಳಲ್ಲಿ ಹಣ ಪತ್ತೆಯಾಗಿದೆ ಎಂಬುದು ಸರಿಯಲ್ಲ ಎಂದು ಹೇಳಿದರು.

ಇ.ಡಿ. ಅಧಿಕಾರಿಗಳು ಎರಡು ಟ್ರಂಕ್‌ಗಳನ್ನು ತಂದಿದ್ದರು. ಒಂದು ಟ್ರಂಕ್‌ನಲ್ಲಿ ಹಣ ತೆಗೆದುಕೊಂಡು ಹೋಗಿದ್ದು, ಮತ್ತೊಂದು ಖಾಲಿ ಟ್ರಂಕ್‌ ಅನ್ನು ಮನೆಯಲ್ಲೇ ಬಿಟ್ಟಿದ್ದಾರೆ. ಅಗತ್ಯವಿದ್ದರೆ ಆ ಟ್ರಂಕ್‌ ಅನ್ನು ತೋರಿಸಲು ಸಿದ್ಧ ಎಂದು ಬಾಲಚಂದ್ರ ಹೇಳಿದರು.

ಮನೆಯಲ್ಲಿ ವಶಪಡಿಸಿಕೊಂಡ ₹1.73 ಕೋಟಿಗೆ ಲೆಕ್ಕವಿದ್ದು, ಕುಟುಂಬದ ಲೆಕ್ಕಪರಿಶೋಧಕರು ಸಂಬಂಧಿತ ದಾಖಲೆಗಳನ್ನು ಸಿದ್ಧಪಡಿಸಿದ್ದಾರೆ. ಅವುಗಳನ್ನು ಅಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದರು. ಆದರೆ ಬೆಳಗಾವಿ, ಬೆಂಗಳೂರು ಸೇರಿದಂತೆ ಇತರ ಸ್ಥಳಗಳಲ್ಲಿ ನಡೆದ ಶೋಧದ ಸಂಪೂರ್ಣ ವಿವರ ತಮಗೆ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಹುಲ್ ಜಾರಕಿಹೊಳಿ, ಪ್ರಿಯಾಂಕಾ ಜಾರಕಿಹೊಳಿ ಹಾಗೂ ಮಹಾದೇವಿ ಅವರು ವಿದೇಶಿ ಕಂಪನಿಯೊಂದರಲ್ಲಿ ಭಾಗಿಯಾಗಿದ್ದಾರೆ. ರಾಹುಲ್ ಮತ್ತು ಪ್ರಿಯಾಂಕಾ ತಲಾ ಸುಮಾರು ₹25 ಸಾವಿರ ಹೂಡಿಕೆ ಮಾಡಿದ್ದಾರೆ. ಸದ್ಯ ಆ ಕಂಪನಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಿರುವಾಗ ₹750 ಕೋಟಿ ಹೂಡಿಕೆ ಎಂದು ಬಿಂಬಿಸುವುದು ತಪ್ಪು ಎಂದು ಆಕ್ಷೇಪಿಸಿದರು.

ಆದರೆ ಹೂಡಿಕೆಯ ನಿಜವಾದ ಮೊತ್ತ ಹಾಗೂ ಹಣಕಾಸು ವ್ಯವಹಾರಗಳ ಸಂಪೂರ್ಣ ಚಿತ್ರಣ ಇ.ಡಿ. ತನಿಖೆ ಮತ್ತು ಅಧಿಕೃತ ಪ್ರಕಟಣೆಯ ಬಳಿಕವೇ ಸ್ಪಷ್ಟವಾಗಬೇಕಿದೆ.

ಇ.ಡಿ. ಶೋಧಕ್ಕೆ ರಾಜಕೀಯ ಬಣ್ಣ ನೀಡುವುದನ್ನು ಬಾಲಚಂದ್ರ ವಿರೋಧಿಸಿದರು. ಯಾರಾದರೂ ದೂರು ಅಥವಾ ಆರೋಪ ಮಾಡಿದರೆ ಇ.ಡಿ., ಸಿಬಿಐ, ಆದಾಯ ತೆರಿಗೆ ಇಲಾಖೆ, ಲೋಕಾಯುಕ್ತ ಅಥವಾ ಪೊಲೀಸರು ತನಿಖೆ ನಡೆಸುವುದು ಅವರ ಕರ್ತವ್ಯ. ಹೀಗಾಗಿ ಇದನ್ನು ಕಾಂಗ್ರೆಸ್‌, ಬಿಜೆಪಿ ಅಥವಾ ಜೆಡಿಎಸ್‌ ನಾಯಕರು ರಾಜಕೀಯ ದಾಳಿ ಎಂದು ಬಿಂಬಿಸಬಾರದು ಎಂದರು.

ಸತೀಶ್ ಜಾರಕಿಹೊಳಿ ಅವರ ಬಳಿ ಕಾನೂನು ತಜ್ಞರ ತಂಡವಿದ್ದು, ದಾಖಲೆಗಳೊಂದಿಗೆ ಕಾನೂನು ಹೋರಾಟ ನಡೆಸಬೇಕು. ಸರಿ–ತಪ್ಪನ್ನು ಅಂತಿಮವಾಗಿ ನಿರ್ಧರಿಸುವುದು ನ್ಯಾಯಾಲಯವೇ ಹೊರತು ಮಾಧ್ಯಮ ಚರ್ಚೆಗಳಲ್ಲ ಎಂದು ಹೇಳಿದರು.

‘ಮೈಸೂರು ಲಿಂಕ್‌’ ಕುರಿತು ನಡೆಯುತ್ತಿರುವ ಚರ್ಚೆಗೂ ಆಕ್ಷೇಪ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ಅವರದ್ದು ಸುಮಾರು 30 ವರ್ಷಗಳ ಸ್ನೇಹ. ಈ ಶೋಧವನ್ನು ಮೈಸೂರಿನೊಂದಿಗೆ ಜೋಡಿಸಿ ಇಬ್ಬರ ಸಂಬಂಧ ಹಾಳುಮಾಡುವ ಪ್ರಯತ್ನ ನಡೆಯಬಾರದು ಎಂದರು.

ಸಿದ್ದರಾಮಯ್ಯ ಮತ್ತು ಸತೀಶ್ ಜಾರಕಿಹೊಳಿ ಅವರು ಅಹಿಂದದ ಎರಡು ಕಣ್ಣುಗಳಿದ್ದಂತೆ. ಇವರ ನಡುವಿನ ಸಂಬಂಧಕ್ಕೆ ಧಕ್ಕೆ ಉಂಟಾದರೆ ಅಹಿಂದ ವರ್ಗ ಹಾಗೂ ಸಂಘಟನೆಗೆ ಹೆಚ್ಚು ಹಾನಿಯಾಗಲಿದೆ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಊಹಾಪೋಹ ಹಾಗೂ ರಾಜಕೀಯ ಲೆಕ್ಕಾಚಾರಗಳಿಂದ ದೂರವಿರಬೇಕು ಎಂದು ಮನವಿ ಮಾಡಿದರು.

2017ರಲ್ಲಿ ರಮೇಶ್ ಜಾರಕಿಹೊಳಿ ಸಚಿವರಾಗಿದ್ದಾಗ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿದ ಸಂದರ್ಭದಲ್ಲೂ ಕುಟುಂಬದೊಂದಿಗೆ ನಿಂತು ಕಾನೂನು ಹೋರಾಟಕ್ಕೆ ಧೈರ್ಯ ತುಂಬಿದ್ದೆವು. ಈಗ ಸತೀಶ್, ರಾಹುಲ್ ಹಾಗೂ ಪ್ರಿಯಾಂಕಾ ಅವರಿಗೂ ಅದೇ ಧೈರ್ಯ ಹೇಳಿದ್ದೇವೆ ಎಂದು ಬಾಲಚಂದ್ರ ತಿಳಿಸಿದರು.

Leave a Reply

Your email address will not be published. Required fields are marked *