ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಸಾಧನೆ; ಶೇ.98.5 ಸಾಲ ವಸೂಲಿ; ₹1,568 ಕೋಟಿ ಠೇವಣಿ, ಹೊಸ ಶಾಖೆಗಳನ್ನೂ ತೆರೆಯಲು ಚಿಂತನೆ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಸಿಡಿಸಿಸಿ) 2025–26ನೇ ಸಾಲಿನಲ್ಲಿ ₹6.87 ಕೋಟಿ ನಿವ್ವಳ ಲಾಭ ಗಳಿಸಿದ್ದು, ಶೇ.98.5ರಷ್ಟು ಸಾಲ ವಸೂಲಾತಿ ಸಾಧಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ತಿಳಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ನಡೆದ ಬ್ಯಾಂಕಿನ ಆರ್ಥಿಕ ಪ್ರಗತಿ ಹಾಗೂ ಸಾಧನೆಗಳ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ 21 ಡಿಸಿಸಿ ಬ್ಯಾಂಕ್‌ಗಳ ಪೈಕಿ ಚಿಕ್ಕಮಗಳೂರು ಬ್ಯಾಂಕ್ 7ನೇ ಸ್ಥಾನದಲ್ಲಿದೆ. ನಬಾರ್ಡ್‌ನ ಲೆಕ್ಕಪರಿಶೋಧನೆ ಹಾಗೂ ಮೌಲ್ಯಮಾಪನದಲ್ಲಿ ‘ಎ’ ಗ್ರೇಡ್ ಪಡೆದಿದೆ ಎಂದರು.

2025–26ರ ಅಂತ್ಯಕ್ಕೆ ಬ್ಯಾಂಕ್ ₹65.99 ಕೋಟಿ ಷೇರು ಬಂಡವಾಳ ಹೊಂದಿದ್ದು, 2.24 ಲಕ್ಷಕ್ಕೂ ಹೆಚ್ಚು ಠೇವಣಿದಾರರಿಂದ ₹1,568.53 ಕೋಟಿ ಠೇವಣಿ ಸಂಗ್ರಹಿಸಿದೆ. ವಾರ್ಷಿಕ ವಹಿವಾಟು ಸುಮಾರು ₹3,000 ಕೋಟಿ ಇದೆ ಎಂದು ತಿಳಿಸಿದರು.

ಕಳೆದ ಸಾಲಿನಲ್ಲಿ 54,992 ರೈತರಿಗೆ ₹843.84 ಕೋಟಿ ಶೂನ್ಯ ಬಡ್ಡಿದರದ ಬೆಳೆ ಸಾಲ ವಿತರಿಸಲಾಗಿದೆ. ಕೃಷಿಯೇತರ ಕ್ಷೇತ್ರದಲ್ಲಿ 18,061 ಸಾಲಗಾರರಿಗೆ ₹569.57 ಕೋಟಿ ಸಾಲ ನೀಡಲಾಗಿದೆ. ಒಟ್ಟಾರೆ ಸಾಲ ವಸೂಲಾತಿ ಶೇ.98.5ರಷ್ಟಿದ್ದು, ಎನ್‌ಪಿಎ ಪ್ರಮಾಣ ಶೇ.3.5ರಷ್ಟಿದೆ ಎಂದರು.

ಬ್ಯಾಂಕ್ ಯುಪಿಐ, ಫೋನ್‌ಪೇ, ಗೂಗಲ್‌ಪೇ, ಮೈಕ್ರೋ ಎಟಿಎಂ ಸೇರಿದಂತೆ ಆಧುನಿಕ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ. ಇನ್ನಷ್ಟು ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಅಳವಡಿಸಿಕೊಂಡು ರೈತ ಮತ್ತು ಗ್ರಾಹಕ ಸ್ನೇಹಿ ಬ್ಯಾಂಕ್ ಆಗಿಸುವ ಗುರಿಯಿದೆ ಎಂದರು.

ಪ್ರಸ್ತುತ 28 ಶಾಖೆಗಳಿದ್ದು, ಲಿಂಗದಳ್ಳಿ, ಮಲ್ಲಂದೂರು, ಎಂ.ಸಿ.ಹಳ್ಳಿ, ಚೌಲುಹಿರಿಯೂರು ಹಾಗೂ ಗವನಹಳ್ಳಿ ಅಥವಾ ಮೂಗ್ತಿಹಳ್ಳಿ ಭಾಗಗಳಲ್ಲಿ ಹೊಸ ಶಾಖೆ ಆರಂಭಿಸುವ ಸಾಧ್ಯತೆ ಪರಿಶೀಲಿಸಲಾಗುತ್ತಿದೆ. ಪ್ರಾಥಮಿಕ ಸಮೀಕ್ಷೆ ಬಳಿಕ ಕಾರ್ಯಸಾಧ್ಯತಾ ವರದಿ ಆಧರಿಸಿ ಆರ್‌ಬಿಐ ಅನುಮತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದರು.

ನಬಾರ್ಡ್‌ನ ಮರುಹಣಕಾಸು ನೆರವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ಸಾಲಿನ ನೆರವಿನ ಕುರಿತು ಸ್ಪಷ್ಟತೆ ಅಗತ್ಯವಿದೆ. ಸರ್ಕಾರದಿಂದ ಬ್ಯಾಂಕ್‌ಗೆ ಬರಬೇಕಿದ್ದ ₹32 ಕೋಟಿ ಬಡ್ಡಿ ಸಹಾಯಧನದಲ್ಲಿ ₹7 ಕೋಟಿ ಬಿಡುಗಡೆಯಾಗಿದ್ದು, ₹25 ಕೋಟಿ ಬಾಕಿಯಿದೆ. ಶೂನ್ಯ ಬಡ್ಡಿದರದ ಬೆಳೆ ಸಾಲ ಮುಂದುವರಿಸಲು ಸಹಾಯಧನವನ್ನು ನಿಯಮಿತವಾಗಿ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಬ್ಯಾಂಕಿನ ನಿರಂತರ ಲಾಭದಾಯಕ ಪ್ರಗತಿಗೆ ಸಿಬ್ಬಂದಿ, ರೈತರು, ಸದಸ್ಯರು ಹಾಗೂ ಠೇವಣಿದಾರರ ಸಹಕಾರ ಕಾರಣ ಎಂದು ಸಿ.ಟಿ. ರವಿ ಅಭಿನಂದಿಸಿದರು.

Leave a Reply

Your email address will not be published. Required fields are marked *