ನವದೆಹಲಿ : ರಾಷ್ಟ್ರ ರಾಜಧಾನಿಯ ರಾಷ್ಟ್ರಪತಿ ಭವನದಲ್ಲಿ ಭಾನುವಾರ ನಡೆದ ಭವ್ಯ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ವಿವಿಧ ಕ್ಷೇತ್ರಗಳ ಗಣ್ಯ ಸಾಧಕರಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿ 2026ನ್ನು ಪ್ರದಾನ ಮಾಡಿದರು. ಈ ಗೌರವ ಪಟ್ಟಿಯಲ್ಲಿ ಕರ್ನಾಟಕದ ಐವರು ಸಾಧಕರು ಸ್ಥಾನ ಪಡೆದಿದ್ದು, ರಾಜ್ಯಕ್ಕೆ ಹೆಮ್ಮೆಯ ಕ್ಷಣವಾಗಿ ಪರಿಣಮಿಸಿದೆ.
ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸೇವೆ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿರುವ ಕೆಎಲ್ಇ ಸಂಸ್ಥೆಯ ನಾಯಕ, ಮಹಾದಾನಿ ಡಾ. ಪ್ರಭಾಕರ್ ಕೋರೆ ಅವರಿಗೆ ಪದ್ಮಶ್ರೀ ಪ್ರದಾನ ಮಾಡಲಾಯಿತು. ಜೊತೆಗೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಬಳಕೆಯಲ್ಲಿರುವ ‘ದೃಷ್ಟಿ’ ವ್ಯವಸ್ಥೆಯನ್ನು ಆವಿಷ್ಕರಿಸಿ, ‘ಅಗ್ನಿ’ ಕ್ಷಿಪಣಿಯ ತಾಂತ್ರಿಕ ದೋಷ ನಿವಾರಣೆಗೆ ಕಾರಣರಾದ ವಿಜ್ಞಾನಿ ಡಾ. ಶುಭಾ ವೆಂಕಟೇಶ್ ಅಯ್ಯಂಗಾರ್ ಅವರಿಗೂ ಪದ್ಮಶ್ರೀ ಗೌರವ ಲಭಿಸಿದೆ.

ಪ್ರೆಸ್ಟೀಜ್ ಸಂಸ್ಥೆಯನ್ನು ಬಿಲಿಯನ್ ಡಾಲರ್ ಉದ್ಯಮವಾಗಿ ರೂಪಿಸಿದ ಉದಾರ ಉದ್ಯಮಿ ಶ್ರೀ ಟಿ.ಟಿ. ಜಗನ್ನಾಥನ್ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕುಕ್ಕರ್ ಅಪಘಾತ ತಡೆಯುವ ಪೇಟೆಂಟ್ ಹಕ್ಕನ್ನು ಸಾರ್ವಜನಿಕ ಹಿತಕ್ಕಾಗಿ ಉಚಿತವಾಗಿ ಬಿಟ್ಟುಕೊಟ್ಟ ಅವರ ನಿರ್ಧಾರವನ್ನು ರಾಷ್ಟ್ರ ಸ್ಮರಿಸಿದೆ.
ಇದೇ ವೇಳೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಹಿಮೋಫಿಲಿಯಾ ರೋಗಿಗಳಿಗೆ ಉಚಿತ ಚಿಕಿತ್ಸೆ ದೊರಕುವಂತೆ ಮಾಡಿದ ಕ್ರಾಂತಿಕಾರಿ ವೈದ್ಯ ಡಾ. ಸುರೇಶ್ ಹನಗವಾಡಿ ಹಾಗೂ ದೂರದರ್ಶನ–ಆಕಾಶವಾಣಿಯನ್ನು ನವೀಕರಿಸಿ, ಕೋವಿಡ್ ಅವಧಿಯಲ್ಲಿ ‘ರಾಮಾಯಣ’ ಪ್ರಸಾರ ಮೂಲಕ ಜಾಗತಿಕ ದಾಖಲೆ ಬರೆದ ತಂತ್ರಜ್ಞ ಶಶಿ ಶೇಖರ್ ವೇಂಪತಿ ಅವರಿಗೂ ಪದ್ಮಶ್ರೀ ನೀಡಿ ಗೌರವಿಸಲಾಯಿತು.
